ರಕ್ಷಾಬಂಧನ ದಿನದಂದೇ ಅಣ್ಣನ ಬಗ್ಗೆ ಕೆಟ್ಟ ಕಾಮೆಂಟ್, ಅತ್ತಿಗೆಯ ಕತ್ತು ಕೊಯ್ದು ನೀರಿನ ಟ್ಯಾಂಕ್ಗೆ ಎಸೆದ ತಂಗಿ!
ಮೃತ ಮಹಿಳೆಯನ್ನು ವಂದನಾ ಎಂದು ಗುರುತಿಸಲಾಗಿದೆ. ವಂದನಾ ಅವರು ಆಗಸ್ಟ್ 11ರಂದು ಕುಟುಂಬದ ವಿರೋಧದ ನಡುವೆಯೇ ಉಪೇಂದ್ರ ಎಂಬುವರನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು.
ಇಂದೋರ್: ರಕ್ಷಾಬಂಧನದಂದು ತನ್ನ ಸಹೋದರನ ಬಗ್ಗೆ ಅತ್ತಿಗೆ ವ್ಯಂಗ್ಯವಾಗಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ತಂಗಿಯೊಬ್ಬಳು ಅತ್ತಿಗೆಯನ್ನೇ ಚಾಕುವಿನಿಂದ ಇರಿದು ಕೊಂದು ಹಾಕಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದ್ದು, ತನ್ನ ಅಣ್ಣನ ಕುರಿತು ಕ್ಷುಲ್ಲಕವಾಗಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೇ ತಂಗಿ ತನ್ನ ಅತ್ತಿಗೆಯನ್ನು ಭೀಕರವಾಗಿ ಕೊಂದು ಹಾಕಿದ್ದಾಳೆ.
ಕೊಲೆ ಬಳಿಕ ಶವವನ್ನು ಮನೆಯ ಹೊರಗಿದ್ದ ನೀರಿನ ಟ್ಯಾಂಕ್ಗೆ ಎಸೆದು ಪೊಲೀಸರನ್ನೂ ಕುಟುಂಬದವರನ್ನೂ ದಿಕ್ಕುತಪ್ಪಿಸಲು ಯತ್ನಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪಾರ್ವತಿ ಬಾಯಿ ಕುಶ್ವಾಹ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.
ಮೃತ ಮಹಿಳೆಯನ್ನು ವಂದನಾ ಎಂದು ಗುರುತಿಸಲಾಗಿದೆ. ವಂದನಾ ಅವರು ಆಗಸ್ಟ್ 11ರಂದು ಕುಟುಂಬದ ವಿರೋಧದ ನಡುವೆಯೇ ಉಪೇಂದ್ರ ಎಂಬುವರನ್ನು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಕುಟುಂಬಗಳಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದಾಗಿ ದಂಪತಿ ಪ್ರತ್ಯೇಕವಾಗಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಫೋನ್ ಕರೆ ಸ್ವೀಕರಿಸಲು ಬೈಕ್ ನಿಲ್ಲಿಸಿದ್ದ ಕುಟುಂಬಕ್ಕೆ ವೇಗದ ಕಾರು ಡಿಕ್ಕಿ; 3 ವರ್ಷದ ಮಗು ಸೇರಿ ಮೂವರ ಸಾವು
ಪಾರ್ವತಿಯ ಸಹೋದರ ದಮೋಹ್ನಲ್ಲಿ ಅತ್ಯಾಚಾರ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾನೆ ಎನ್ನಲಾಗಿದೆ. ರಕ್ಷಾಬಂಧನದ ದಿನ ವಂದನಾ ಆತನ ಬಗ್ಗೆ ಮಾತನಾಡಿದ್ದರಿಂದ ಪಾರ್ವತಿಗೆ ಕೋಪ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಾತಿನ ಚಕಮಕಿ ತೀವ್ರಗೊಂಡ ಬಳಿಕ ಆಕ್ರೋಶಗೊಂಡ ಪಾರ್ವತಿ ವಂದನಾಳನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಕೊಲೆ ನಡೆದ ಸಂದರ್ಭದಲ್ಲಿ ಪಾರ್ವತಿಯ ಮಕ್ಕಳು ಶಾಲೆಯಲ್ಲಿದ್ದರು. ಆಕೆಯ ಪತಿ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಪಾರ್ವತಿ ಚಾಕುವಿನಿಂದ ವಂದನಾಳ ಕುತ್ತಿಗೆಗೆ ಎರಡು ಬಾರಿ ಇರಿದಿದ್ದಾಳೆ. ಬಳಿಕ ಶವವನ್ನು ಮನೆಯ ಹೊರಗೆ ಎಳೆದುಕೊಂಡು ಹೋಗಿ ಅಲ್ಲಿದ್ದ ನೀರಿನ ಟ್ಯಾಂಕ್ಗೆ ಎಸೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯದಿಂದ ಶಂಕೆ
ಕೊಲೆ ಬಳಿಕ ಪಾರ್ವತಿ ತನ್ನ ಪತಿಯನ್ನು ನೋಡಲು ಆಸ್ಪತ್ರೆಗೆ ತೆರಳಿದ್ದಳು. ಇತ್ತ ವಂದನಾ ಕಾಣೆಯಾಗಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ CCTV ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.
CCTV ದೃಶ್ಯಗಳ ಆಧಾರದ ಮೇಲೆ ಪೊಲೀಸರು ಪಾರ್ವತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಪಾರ್ವತಿ ಪೊಲೀಸರನ್ನು ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಳು. ಆದರೆ ವಿಚಾರಣೆ ತೀವ್ರಗೊಂಡಂತೆ ಆಕೆ ಕುಸಿದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಲು ಬಳಸಿದ ಚಾಕುವಿನ ಮೇಲೆ ಬೆರಳಚ್ಚು ಪತ್ತೆಯಾಗಿದೆ ಹಾಗೂ ತಪ್ಪಿಸಿಕೊಳ್ಳಲು ಯಾವುದೇ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದ ಬಳಿಕ ಪಾರ್ವತಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
TAGS:
Indore
ಇಂದೋರ್
ಕೊಲೆ
murder
Madhya Pradesh
ಮಧ್ಯ ಪ್ರದೇಶ
Raksha Bandhan
ರಕ್ಷಾ ಬಂಧನ
E
E Tv News Desk
Senior Staff Journalist and Correspondent at ETV 24X7. Covering breaking global stories, contemporary culture, and modern innovations.